Welcome To Savi Savi Nenapu

Naveen Chinthakaaya

Monday, October 15, 2012

Shree Vishnu Sahasranama - 12

ವಿಷ್ಣು ಸಹಸ್ರನಾಮ: ಶ್ಲೋಕ -12
 
 

ವಸುರ್ವಸುಮನಾಃ ಸತ್ಯಃ ಸಮಾತ್ಮಾ ಸ೦ಮಿತಃ ಸಮಃ/
ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿ:

ವಸುರ್ವಸುಮನಾಃ ಸತ್ಯಃ

1) ವಸು
ನಿಘಂಟಿನಲ್ಲಿ ವಸು ಅನ್ನುವ ಪದಕ್ಕೆ ಸಿರಿ ಅಥವಾ ಸಂಪತ್ತು ಅನ್ನುವ ಅರ್ಥವಿದೆ. ಸಾಮಾನ್ಯವಾಗಿ ಸಿರಿ-ಸಂಪತ್ತು ಅಂದಾಗ ನಮಗೆ ದುಡ್ಡಿನ ನೆನಪಾಗುತ್ತದೆ. ಆದರೆ ಒಬ್ಬೊಬ್ಬರಿಗೆ ಒಂದೊಂದು ಸಂಪತ್ತು. ನಮಗೆ ಜೀವನದಲ್ಲಿ ಯಾವುದು ಸುಖ-ಸಂತೋಷವನ್ನು ಕೊಡುತ್ತದೋ ಅದನ್ನು ಸಂಪತ್ತು ಎಂದು ತಿಳಿಯುತ್ತೇವೆ. ಕೆಲವರಿಗೆ ಮಣ್ಣು ಸಂಪತ್ತಾಗಿ ಕಾಣಿಸಿದರೆ ಇನ್ನು ಕೆಲವರಿಗೆ ಹೆಣ್ಣು-ಹೊನ್ನು ಸಂಪತ್ತು ಎನ್ನುವ ಬ್ರಮೆ ಇರುತ್ತದೆ.
ಆದರೆ ನಿಜವಾದ ಸಂಪತ್ತು ಯಾವುದು? ಯಾವುದನ್ನು ಹಂಚುವುದರಿಂದ ಬೆಳೆಯುತ್ತಾ ಹೋಗಿ ಸಾವಿರ-ಸಾವಿರ ವರ್ಷಗಳ ತನಕ ಅಜರಾಮರವಾಗಿ ಉಳಿಯುತ್ತದೋ, ಅದು ನಿಜವಾದ ಸಂಪತ್ತು. ಅದೇ ಜ್ಞಾನ.
ಯಾವ್ಯಾವುದೋ ವ್ಯರ್ಥವಾದ ಜ್ಞಾನ ಸಂಪತ್ತಲ್ಲ. ಯಾವುದು ನಮ್ಮನ್ನು ಉದ್ದಾರ ಮಾಡುವ ಶಕ್ತಿಯೋ, ಅದರ ಜ್ಞಾನ ನಿಜವಾದ ಸಂಪತ್ತು. ಆದ್ದರಿಂದ ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಂಪತ್ತು ಭಗವಂತನ ಜ್ಞಾನ. ಆದ್ದರಿಂದ ಭಗವಂತ 'ವಸು'

2) ವಸುಮನಾಃ
ಇಲ್ಲಿ ವಸುಗಳು ಅಂದರೆ ಭಗವಂತನನ್ನು ಅರಿತವರು. ಮುಖ್ಯವಾಗಿ ದೇವತೆಗಳು ಹಾಗು ಯಾರು ತನ್ನ ಹೃದಯದಲ್ಲಿ ಭಗವಂತ ವಾಸವಾಗಿದ್ದಾನೆ ಎಂದು ತಿಳಿದಿದ್ದಾರೋ ಅವರು ವಸುಗಳು.
ವಸುಗಳು ಅಂದರೆ ಪರಿಶುದ್ದವಾದ ಮನಸ್ಸುಳ್ಳವರು ಎನ್ನುವ ಅರ್ಥ ಕೂಡಾ ಇದೆ. ಆದ್ದರಿಂದ ಪರಿಶುದ್ಧವಾದ, ಸತ್ವಗುಣದಿಂದ, ಅನನ್ಯವಾಗಿ ಪ್ರಾರ್ಥಿಸುವ 'ವಸುಗಳಿಗೆ' ಕಾಣಿಸಿಕೊಳ್ಳುವ ಭಗವಂತ ವಸುಮನಾ.

3) ಸತ್ಯಃ
ಸತ್ಹ್ ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಸರ್ವಸೃಷ್ಟ, ಸರ್ವ ನಿಯಾಮಕ, ಸರ್ವ ಸ್ಥಿತಿ ಕಾರಣ , ಸರ್ವ ಸಂಹಾರಕ ಇತ್ಯಾದಿ. ಅದೇ ರೀತಿ ಸತ್ ಅಂದರೆ ಜ್ಞಾನ-ಅಜ್ಞಾನ-ಬಂದ-ಮೋಕ್ಷ.
ಆದ್ದರಿಂದ ಸತ್ಯಃ ಅಂದರೆ ಸೃಷ್ಟಿಪ್ರದ, ಸ್ಥಿತಿಪ್ರದ, ಸಂಹಾರಪ್ರದ, ನಿಯಾಮಕ, ಜ್ಞಾನಪ್ರದ, ಅಜ್ಞಾನಪ್ರದ, ಬಂದಪ್ರದ ಮತ್ತು ಮೊಕ್ಷಪ್ರದನಾದ ಭಗವಂತ.
ಸೃಷ್ಟಿ-ಸ್ಥಿತಿ-ಸಂಹಾರ ನಿಯಾಮಕನಾಗಿ, ಜ್ಞಾನಾಜ್ಞಾನ-ಬಂದ-ಮೋಕ್ಷಗಳಿಗೆ ಕಾರಣನಾಗಿರುವ, ಸದ್ಗುಣ ಸ್ವರೂಪ ಜ್ಞಾನಾನಂದಮಯನಾದ ಭಗವಂತ 'ಸತ್ಯ'.

ಸಮಾತ್ಮಾ ಸಂಮಿತಃ ಸಮಃ

4) ಸಮಾತ್ಮಾ
ಭಗವಂತ 'ಸರ್ವೇಶು ಸಮಾತ್ಮಾ' ಅಂದರೆ ಸರ್ವರನ್ನು ಸಮಾನಾಗಿ ತಾರತಮ್ಯ ಇಲ್ಲದೆ ಕಾಣುವವನು.
ಈ ಪ್ರಪಂಚ ಒಂದು ತೋಟವಿದ್ದಂತೆ ಹಾಗು ಭಗವಂತ ಒಬ್ಬ ತೋಟಗಾರ. ಈ ಜೀವರು ಬೀಜಗಳು! ಬೀಜವನ್ನು ಮನೆಯೋಳಗಿಟ್ಟರೆ ಅದು ಫಲ ಕೊಡಲಾರದು, ಅದನ್ನು ಉತ್ತಿ-ಬಿತ್ತಿ ಪಾಲಿಸಿದಾಗ ಆ ಚಿಕ್ಕ ಬೀಜ ಹೆಮ್ಮರವಾಗಿ ಬೆಳೆಯುತ್ತದೆ ಮತ್ತು ತನ್ನ ಗುಣ ಸ್ವಭಾವದಂತೆ ಫಲವನ್ನು ಕೊಡುತ್ತದೆ. ಹುಣಸೆ ಹಣ್ಣು ಹುಳಿಯಾಗಿರುವುದಕ್ಕೆ ತೋಟಗಾರ ಕಾರಣನಲ್ಲ, ಅದರ ಗುಣ ಸ್ವಭಾವ ಕಾರಣ. ಅದೇ ರೀತಿ ಈ ಪ್ರಪಂಚದಲ್ಲಿ ಬೇರೆ ಬೇರೆ ರೀತಿಯ ಜನರನ್ನು ಕಾಣುತ್ತೇವೆ. ಭಗವಂತ ಒಬ್ಬ ತೋಟಗಾರನಂತೆ ಪ್ರತಿಯೊಬ್ಬರನ್ನು ಪಾಲಿಸಿ ಪೋಷಿಸುತ್ತಾನೆ. ಜೀವರು ಭಗವಂತನ ಕೃಪೆಯಿಂದ ತನ್ನ ಜೀವ ಸ್ವಭಾವದಂತೆ, ತನ್ನ ಕರ್ಮಫಲದಂತೆ ಬೆಳೆಯುತ್ತಾರೆ. ಭಗವಂತ ಜೀವರಿಗೆ ಕೊಡುವುದು ಶಿಕ್ಷೆ ಅಲ್ಲ ಶಿಕ್ಷಣ.ಭಗವಂತ ತನ್ನ ಎಲ್ಲಾ ಅವತಾರಗಳಲ್ಲಿ ಎಲ್ಲಾ ಕ್ರಿಯೆಗಳಲ್ಲಿ ಸಮಾತ್ಮ, ಅದರಲ್ಲಿ ಅಂತರವಿಲ್ಲ. ಭಗವಂತ ಅಖಂಡ, ಅಬಿವ್ಯಕ್ತ ಮಾತ್ರ ಬೇರೆ ಬೇರೆಯಾಗಿ ಕಾಣುತ್ತದೆ. ಎಲ್ಲರಲ್ಲೂ ಇರುವ ಬಿಂಬ ಒಂದೇ, ಆದರೆ ಪ್ರತಿಬಿಂಬ ಬೇರೆ ಬೇರೆ. ಇರುವೆ ಒಳಗೆ ಇರುವ ಬಿಂಬ ರೂಪಿ ಭಗವಂತನಿಗೂ ಆನೆಯೊಳಗಿರುವ ಬಿಂಬ ರೂಪಿ ಭಗವಂತನಿಗೂ ಯಾವುದೇ ರೀತಿ ವ್ಯತ್ಯಾಸವಿಲ್ಲ, ಅಬಿವ್ಯಕ್ತ ಮಾತ್ರ ಬೇರೆ ಬೇರೆ . ಅದ್ದರಿಂದ ಭಗವಂತ ಸಮಾತ್ಮಾ.

5) (ಅ)ಸಂಮಿತಃ
ಮೇಲೆ ಹೇಳಿದಂತೆ ಭಗವಂತ ಸಮಾತ್ಮಾ ಎಂದು ಎಲ್ಲಾ ಜ್ಞಾನಿಗಳು ಬಲ್ಲರು ಆದ್ದರಿಂದ ಆತ ಸಂಮಿತ. ಅವನು ಎಲ್ಲಾ ಕಡೆ ಸಮನಾಗಿದ್ದರೂ ಕೂಡ ಆತನಿಗೆ ಸಮನಾದವರು ಇನ್ನೊಬ್ಬರಿಲ್ಲ ಆದ್ದರಿಂದ ಆತ ಅಸಂಮಿತ ಕೂಡ ಹೌದು!!

6) ಸಮಃ
ಸಮಃ ಅನ್ನುವ ಶಬ್ದ ಎಲ್ಲರೂ ಎಲ್ಲಾ ಬಾಷೆಗಳಲ್ಲಿ ಉಪಯೋಗಿಸುವ ಸರ್ವೇಸಾಮಾನ್ಯ ಶಬ್ದ. ಆದರೆ ಇದು ಭಗವಂತನ ನಾಮ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಸಮ ಅಂದರೆ ಎಲ್ಲರನ್ನು ಏಕ ರೂಪದಲ್ಲಿ ನೋಡುವವ ಎನ್ನುವುದು ಎಲ್ಲರಿಗೂ ಹೊಳೆಯುವ ಅರ್ಥ. ಈ ಪದವನ್ನು ಒಡೆದರೆ 'ಸ' ಮತ್ತು 'ಮ' ಎನ್ನುವ ಅಪೂರ್ವ ಅರ್ಥವುಳ್ಳ ಸಂಕ್ಷಿಪ್ತ (Abbreviation) ಪದ ಕಾಣ ಸಿಗುತ್ತದೆ. ಸ ಅಂದರೆ ಸಾರ, ಮ ಎಂದರೆ ಜ್ಞಾನ ಅಥವಾ ಆನಂದ. ಆದ್ದರಿಂದ ಸಮ ಅಂದರೆ ಜ್ಞಾನಾನಂದ ಸ್ವರೂಪ ಎಂದರ್ಥ. ಈ ರೀತಿ ಪದಗಳನ್ನು ಒಡೆದಾಗ ವಿಶಿಷ್ಟ ಅರ್ಥ ಸಂಸ್ಕೃತ ಬಾಷೆ ಮಾತ್ರ ಕೊಡಬಲ್ಲದು. ನೀವು ಕೆಲವು ಆಮಂತ್ರಣ ಪತ್ರಿಕೆಯಲ್ಲಿ 'ಸ-ಕುಟುಂಬ' ಅನ್ನುವ ಪದವನ್ನು ನೋಡಿರಬಹುದು. ಇಲ್ಲಿ 'ಸ' ಅಂದರೆ ಸಹಿತ ಎಂದರ್ಥ. ಇನ್ನು 'ಮಃ' ಎಂದರೆ ಮಾತೆ, ಮಾತು, ವಾಚ್ಯ,,ಮಾನ ಅಥವಾ ಪ್ರಮಾಣ ಎನ್ನುವ ಹಲವು ಅರ್ಥವನ್ನು ಕೊಡುತ್ತದೆ. ಆದ್ದರಿಂದ ಸಮಃ ಅಂದರೆ ಸಮಸ್ತ ವೇದವಾಚ್ಯ, ಸಮಸ್ತ ಶಬ್ದ ವಾಚ್ಯ ಎಂದಾಗುತ್ತದೆ. ಇಂತಹ ಭಗವಂತನ ನಿಜವಾದ ಅನುಭವವಾಗದೆ ಅವನನ್ನು ಯಾವ ಯುಕ್ತಿಯಿಂದ ತಿಳಿಯಲು ಅಸಾದ್ಯ. ಒಮ್ಮೆ ಭಗವಂತನನ್ನು ತಿಳಿದ ಮೇಲೆ ಎಲ್ಲಾ ಯುಕ್ತಿಗಳು ಆತನನ್ನೇ ಹೇಳುತ್ತವೆ. ಇಂತಹ ಭಗವಂತ ಯಾವಾಗಲೂ ಮಾತೆ ಲಕ್ಷ್ಮೀದೇವಿ ಸಮೇತನಾಗಿ ಇರುತ್ತಾನೆ. ಈ ಎಲ್ಲಾ ಕಾರಣದಿಂದಾಗಿ ಭಗವಂತ ಸಮಃ

ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿಃ

7) ಅಮೋಘಃ
ಮೋಘ ಅಂದರೆ ವ್ಯರ್ಥ, ಅಮೋಘ ಅಂದರೆ ವ್ಯರ್ಥವಲ್ಲದ್ದು. ಯಾರ ಸಂಕಲ್ಪ ವ್ಯರ್ಥವಾಗುವುದಿಲ್ಲವೋ ಅವನು ಅಮೋಘ. ಭಗವಂತನ ಸಂಕಲ್ಪ ಎಂದೂ ವ್ಯರ್ಥವಾಗಲಾರದು. ಆತನ ಸಂಕಲ್ಪವನ್ನು ಯಾರಿಂದಲೂ ಬದಲಿಸಲು ಅಸಾದ್ಯ. ಭಗವಂತ ಈ ಪ್ರಪಂಚವನ್ನು ಏಕೆ ಸೃಷ್ಟಿ ಮಾಡಿದ? ಅವನಿಗೆ ಇದರಿಂದ ಏನು ಪ್ರಯೋಜನ? ಈ ಪ್ರಪಂಚ ಭಗವಂತನಿಗೆ ಮೋಘ(ವ್ಯರ್ಥ), ಆದರೆ ನಮಗೆ ಅಮೋಘ! ಈ ಪ್ರಪಂಚವನ್ನು ಭಗವಂತ ಎಲ್ಲಾ ಜೀವರಿಗಾಗಿಯೇ ಸೃಷ್ಟಿ ಮಾಡಿರುವುದು. ಇಂತಹ ಭಗವಂತ ಅಮೋಘ.

8) ಪುಂಡರೀಕಾಕ್ಷ
ಅಮರಕೋಶದಲ್ಲಿ ಪುಂಡರೀಕಾಕ್ಷ ಎಂದರೆ ಬಿಳಿ ತಾವರೆಯಂತಹ ಕಣ್ಣುಳ್ಳವನು ಎಂದಿದೆ, ಆದರೆ ಪುಂಡರೀಕಾಕ್ಷ ಎಂದರೆ ಕೆಂದಾವರೆಯಂತಹ ಕಣ್ಣುಳ್ಳವನು ಎಂದರ್ಥ. ಭಗವಂತನ ಕಣ್ಣು ಯಾವಾಗಲೂ ಕೆಂದಾವರೆ ಎಸಳಿನಂತೆ ಅರಳಿ ನಳನಳಿಸುತ್ತಿರುತ್ತದೆ. ಸಾಮಾನ್ಯವಾಗಿ ನಮಗೆ ಅತ್ಯಂತ ಸಂತೋಷವಾದಾಗ ನಮ್ಮ ಕಣ್ಣು ಅರಳುತ್ತವೆ. ಆದರೆ ಭಗವಂತ ಸದಾ ಸಂತೋಷದ ಬುಗ್ಗೆ. ಭಗವಂತನ ಕೈಯಲ್ಲಿ ನಾಲ್ಕು ಆಯುದಗಳಿರುತ್ತವೆ. ಚಕ್ರ, ಶಂಖ, ಗಧಾ, ಪದ್ಮ (ಪುಂಡರೀಕ). ಈ ನಾಲ್ಕು ಆಯುದಗಳು ಕ್ರಮವಾಗಿ ಧರ್ಮ, ಅರ್ಥ, ಕಾಮದ ನಿಯಂತ್ರಣ ಹಾಗು ಮೋಕ್ಷದ ಸಂಕೇತ. ಆದ್ದರಿಂದ ಪುಂಡರೀಕ ಎಂದರೆ ಮೋಕ್ಷಪ್ರದಾಯಕ ಎಂದರ್ಥ.
ಭಗವಂತನ ಹೊಕ್ಕುಳಲ್ಲಿ ಪದ್ಮಕೋಶ ರೂಪದ ಈ ಬ್ರಹ್ಮಾಂಡ ರಚನೆಯಾಗಿದ್ದು, ಆತ ಅದನ್ನು ತನ್ನ ಹೃದಯಕಮಲದಲ್ಲಿ ತುಂಬಿಕೊಂಡಿದ್ದಾನೆ. ಇಂತಹ ಭಗವಂತ ಪುಂಡರೀಕಾಕ್ಷ.

9) ವೃಷಕರ್ಮಾ
ಭಗವಂತನ ಈ ನಾಮವನ್ನು ವಿಶ್ಲೇಷಿಸುವ ಮೊದಲು ಭಗವದ್ಗೀತೆಯ ಈ ಕೆಳಗಿನ ಶ್ಲೋಕವನ್ನು ಒಮ್ಮೆ ನೋಡೋಣ .
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಾಂ ಸೃಜಾಮ್ಯಹಂ
ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ

ಧರ್ಮನಾಶವಾದಾಗ, ಧರ್ಮದ ಉದ್ಧಾರಕ್ಕಾಗಿ, ಸಜ್ಜನರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸಿ, ಧರ್ಮ ಸ೦ಸ್ಥಾಪನೆ ಮಾಡುಲು ಪದೇ ಪದೇ ಅವತರಿಬರುತ್ತೇನೆ ಎನ್ನುವುದು ಈ ಶ್ಲೋಕದ ಮುಖ್ಯಾರ್ಥ.
ವೃಷ ಅಂದರೆ ಧರ್ಮ. ವೃಷಕರ್ಮಾ ಅಂದರೆ ಧರ್ಮಕ್ಕಾಗಿ ಕರ್ಮ ಮಾಡುವ ಭಗವಂತ. ಧರ್ಮ ಸ೦ಸ್ಥಾಪನೆಗಾಗಿ ಪದೇ ಪದೇ ಅವತರಿಸಿಬರುವುದು ಭಗವಂತನ ಕರ್ಮ. ಈ ರೀತಿ ಅವತರಿಸಿ ಬಂದು ಭಕ್ತಕೋಟಿಯ ಅಭಿಷ್ಟವನ್ನು ಪೂರೈಸಿ ಧರ್ಮದ ರಕ್ಷಣೆ ಮಾಡುವ ಶ್ರೇಷ್ಠ ಭಗವಂತ ವೃಷಕರ್ಮಾ.

10) ವೃಷಾಕೃತಿಃ
ಮೇಲೆ ಹೇಳಿದಂತೆ ಭಗವಂತ ಅವತರಿಸಿ ಬರುತ್ತಾನೆ. ಈ ರೀತಿ ಧರ್ಮದ ರಕ್ಷಣೆಗಾಗಿ ನಾನಾ ಆಕೃತಿಯಲ್ಲಿ ಧರೆಗಿಳಿದು ಬರುವ ಭಗವಂತ ವೃಷಾಕೃತಿ. ಆತ ಧರಿಸುವ ಎಲ್ಲಾ ಆಕೃತಿಗಳು ಆತನ ಭಕ್ತಕೋಟಿಯ ಅಭಿಷ್ಟಕ್ಕೆ ತಕ್ಕನಾಗಿರುತ್ತದೆ. ಈ ರೀತಿ ಭಕ್ತರ ಕೋರಿಕೆಯಂತೆ ವಿಶಿಷ್ಟ ಆಕೃತಿಯನ್ನು ಧರಿಸುವ ಭಗವಂತ ವೃಷಾಕೃತಿಃ .


--
http://i33.tinypic.com/xdxsvl.jpg

 
NaveenChinthakaaya - Creative Guy.......
http://chinthakaaya.blogspot.com/
http://cid-f2be635aeac89a38.skydrive.live.com/browse.aspx/.Public


'Argument wins the situations but loses the person. So when arguing with your loved ones, remember that situations are not more important than your loved ones...'

No comments:

Post a Comment